ಭಾರಿ ಮಳೆಯಿಂದ ನಲುಗಿದ ನೇಪಾಳ : 51 ಸಾವು, ಅನೇಕರು ನಾಪತ್ತೆ – ಭಾರತದಿಂದ ನೆರವಿನ ಭರವಸೆ

ಇತ್ತೀಚೆಗೆ ಯುವಕರ (Gen-Z) ಕೋಪಕ್ಕೆ ಸಿಲುಕಿದ್ದ ನೇಪಾಳ ಇದೀಗ ಪ್ರಕೃತಿಯ ವಿಕೋಪಕ್ಕೆ ತತ್ತರಿಸಿದೆ. ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದೇಶದ ಹಲವು ಭಾಗಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವರುಣಾರ್ಭಟದಿಂದ 51 ಮಂದಿ ಮೃತಪಟ್ಟರೆ, ಹಲವರು ನಾಪತ್ತೆಯಾಗಿದ್ದಾರೆ.

ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯ ನಂತರ ವಿವಿಧೆಡೆ ಭೂಕುಸಿತ ಸಂಭವಿಸಿದ್ದು, ಕೋಶಿ ಪ್ರಾಂತ್ಯದ ಇಲಾಮ್ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಾಣಹಾನಿ ಸಂಭವಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಇಲಾಮ್ ಜಿಲ್ಲೆಯಲ್ಲಿ ಒಟ್ಟು 37 ಮಂದಿ ಸಾವನ್ನಪ್ಪಿದ್ದಾರೆ.

ದೆಯುಮೈ ಮತ್ತು ಮೈಜೋಗ್ಮೈ ಪ್ರದೇಶಗಳಲ್ಲಿ ತಲಾ 8 ಮಂದಿ, ಇಲಾಮ್ ಮತ್ತು ಸಂದಕ್‌ಪುರ ಪ್ರದೇಶಗಳಲ್ಲಿ ತಲಾ 6 ಮಂದಿ, ಸೂರ್ಯೋದಯದಲ್ಲಿ 5, ಮಾಂಗ್ಸೆಬಂಗ್‌ನಲ್ಲಿ 3 ಮತ್ತು ಫಕ್‌ಫೋಕ್ಥಮ್ ಗ್ರಾಮದಲ್ಲಿ 1 ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪಂಚಥರ್‌ನಲ್ಲಿ ಭೂಕುಸಿತದಿಂದ ಒಬ್ಬರು ಸಾವನ್ನಪ್ಪಿದ್ದು, ಖೋಟಾಂಗ್ ಮತ್ತು ಉದಯಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಪ್ರವಾಹದಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ. ರಸುವಾ ಜಿಲ್ಲೆಯಲ್ಲಿ ನಾಲ್ವರು ಪ್ರವಾಹದಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದಾರೆ.

ನೇಪಾಳ ಸೇನೆ, ಪೊಲೀಸರು ಮತ್ತು ಸಶಸ್ತ್ರ ಪೊಲೀಸ್ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಇಲಾಮ್ ಜಿಲ್ಲೆಯಿಂದ ಗರ್ಭಿಣಿ ಮಹಿಳೆ ಸೇರಿದಂತೆ ನಾಲ್ವರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಧರಣ್ ಆಸ್ಪತ್ರೆಗೆ ದಾಖಲಿಸಲಾಗಿದೆ.

🌩️ ಸಿಡಿಲು ಮತ್ತು ಗುಡುಗಿನ ರೌದ್ರತೆ:
ಮಳೆಯ ಜೊತೆಗೆ ಸಿಡಿಲು-ಗುಡುಗಿನ ಆತಂಕವೂ ಹೆಚ್ಚಾಗಿದೆ. ರೌತಹತ್ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಸಾವನ್ನಪ್ಪಿದರೆ, ವಿವಿಧೆಡೆ ಏಳು ಮಂದಿ ಗಾಯಗೊಂಡಿದ್ದಾರೆ. ಕೋಶಿ, ಮಾಧೇಶ್, ಬಾಗ್ಮತಿ, ಗಂಡಕಿ ಮತ್ತು ಲುಂಬಿನಿ ಸೇರಿದಂತೆ ಏಳು ಪ್ರಾಂತ್ಯಗಳಲ್ಲಿ ನಿರಂತರ ಭಾರಿ ಮಳೆ ಸುರಿಯುತ್ತಿದೆ.

🚫 ಅಪಾಯದ ಸೂಚನೆ ಮತ್ತು ಎಚ್ಚರಿಕೆಗಳು:
ಮುಂದಿನ ಮೂರು ದಿನಗಳಲ್ಲಿ ಮತ್ತಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆಯಿಂದಾಗಿ ಕಠ್ಮಂಡುವಿಗೆ ಬರುವ ಮತ್ತು ಹೊರಹೋಗುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಜನರು ಹೊರಬರದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ದೇಶದ ಹಲವೆಡೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶೀಯ ವಿಮಾನಗಳ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

🤝 ನೆರವಿನ ಭರವಸೆ ನೀಡಿದ ಭಾರತ:
ನೇಪಾಳದಲ್ಲಿ ಸಂಭವಿಸಿರುವ ಈ ದುರಂತದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದೆ. ನೆರವು ಮತ್ತು ರಕ್ಷಣಾ ಕಾರ್ಯಾಚರಣೆಗೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆಯನ್ನೂ ಭಾರತೀಯ ವಿದೇಶಾಂಗ ಇಲಾಖೆ ಪ್ರಕಟಿಸಿದೆ.

Post a Comment

Previous Post Next Post