ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನದ ಸಂಸ್ಥಾಪಕ, ಯುವ ನಾಯಕ ಎಂ. ಮಿಥುನ್ ರೈ ನೇತೃತ್ವದಲ್ಲಿ ನಡೆಯುತ್ತಿರುವ ಪಿಲಿನಲಿಕೆ ಪಂಥ ಈ ಬಾರಿ ಹತ್ತನೇ ವರ್ಷದ ಸಂಭ್ರಮದಲ್ಲಿದ್ದು, ಆ.1ರಂದು ಕರಾವಳಿ ಉತ್ಸವ ಮೈದಾನದಲ್ಲಿ ‘ಪಿಲಿನಲಿಕೆ ಪಂಥ-10’ ನಡೆಯಲಿದೆ.
ಖಾಸಗಿ ಹೊಟೇಲ್ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಈ ಕಾರ್ಯಕ್ರಮಕ್ಕೆ ಶಿವಶರಣ್ ಶೆಟ್ಟಿ ನೇತೃತ್ವದ ನಮ್ಮ ಟಿವಿ ಸಹಭಾಗಿತ್ವ ವಹಿಸುತ್ತಿದ್ದು, ಈ ಬಾರಿ ಸಿನಿ, ಕ್ರೀಡಾ ಕ್ಷೇತ್ರದ ಹಲವು ದಿಗ್ಗಜರು ಭಾಗವಹಿಸಲಿದ್ದಾರೆ ಎಂದರು.
ಸೆಲೆಬ್ರಿಟಿಗಳ ಹಾಜರಿ :
ಸಿನಿಮಾ ನಟರಾದ ಸುನೀಲ್ ಶೆಟ್ಟಿ, ಕಿಚ್ಚ ಸುದೀಪ್, ಪೂಜಾ ಹೆಗ್ಡೆ, ರಾಜ್ ಬಿ. ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಹಲವಾರು ಕಲಾವಿದರು, ಕ್ರಿಕೆಟ್ ತಾರೆಗಳಾದ ಅಜಿಂಕ್ಯ ರಹಾನೆ, ಜಿತೇಶ್ ಶರ್ಮಾ, ಇಂಡಿಯನ್ ಬಾಕ್ಸರ್ ವಿಜೇಂದ್ರ ಸಿಂಗ್ ಮುಂತಾದವರು ಆಗಮಿಸಲಿದ್ದಾರೆ ಎಂದರು.
ವಿಶೇಷ ವ್ಯವಸ್ಥೆಗಳು :
ಕಾರ್ಯಕ್ರಮ ನಡೆಯುವ ಮೈದಾನದಲ್ಲಿ ಒಂದೇ ಸಲಕ್ಕೆ 25 ಸಾವಿರಕ್ಕೂ ಹೆಚ್ಚು ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗುವ ಸ್ಪರ್ಧೆ ರಾತ್ರಿ 10ರವರೆಗೆ ನಡೆಯಲಿದೆ. ಪ್ರತೀ ತಂಡಕ್ಕೆ 20 ನಿಮಿಷ ಪ್ರದರ್ಶನಾವಕಾಶ ನೀಡಲಾಗುವುದು.
10 ತಂಡಗಳ ಆಯ್ಕೆ :
ಅಗಸ್ತ್ಯ ಮಂಗಳೂರು, ಶ್ರೀ ವೈದ್ಯನಾಥೇಶ್ವರ ಫ್ರೆಂಡ್ಸ್ ಟೈಗರ್ಸ್, ಮುಳಿಹಿತ್ಲು ಗೇಮ್ಸ್ ಟೀಮ್, ಅನಿಲ್ ಕಾಡಬೆಟ್ಟು, ಜೂನಿಯರ್ ಬಾಯ್ಸ್ ಚಿಲಿಂಬಿ, ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್, ಟ್ಯಾಲೆಂಟ್ ಟೈಗರ್ಸ್ ತುಳುನಾಡು, ಸೋಮೇಶ್ವರ ಫ್ರೆಂಡ್ಸ್ ಕ್ಲಬ್, ಪೊಳಲಿ ಟೈಗರ್ಸ್, ಗೋಕರ್ಣನಾಥ ಹುಲಿ ಸೇರಿದಂತೆ 10 ತಂಡಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮವನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಸಂಸದರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ.
26 ಲಕ್ಷ ರೂ. ಬಹುಮಾನ
ಈ ಬಾರಿ ಒಟ್ಟು 26 ಲಕ್ಷ ರೂ. ಬಹುಮಾನ ಮೊತ್ತವನ್ನು ನಿಗದಿ ಮಾಡಲಾಗಿದೆ.
ಪ್ರಥಮ ಬಹುಮಾನ: 10 ಲಕ್ಷ ರೂ. + ಫಲಕ
ದ್ವಿತೀಯ ಬಹುಮಾನ: 5 ಲಕ್ಷ ರೂ. + ಫಲಕ
ತೃತೀಯ ಬಹುಮಾನ: 3 ಲಕ್ಷ ರೂ. + ಫಲಕ
ಪ್ರತಿ ತಂಡಕ್ಕೆ 50 ಸಾವಿರ ರೂ. ಗೌರವ ಧನ
6 ವೈಯಕ್ತಿಕ ಪ್ರಶಸ್ತಿಗಳು (ಕಪ್ಪುಹುಲಿ, ಮರಿಹುಲಿ, ತಾಸೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ) ಪ್ರತಿ ಪ್ರಶಸ್ತಿಗೆ 50 ಸಾವಿರ ರೂ. + ಫಲಕ
ದಶಮ ಸಂಭ್ರಮ ವಿಶೇಷತೆಗಳು
ಹತ್ತನೇ ವರ್ಷದ ಅಂಗವಾಗಿ ಮೂಡುಬಿದಿರೆ ಸರಕಾರಿ ತಾಲೂಕು ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಗೆ ಶ್ರಮಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಹಕಾರಿ ರತ್ನ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಗೌರವ ಸನ್ಮಾನ ನನೆರವೇರಲಿದೆ
ಪತ್ರಿಕಾಗೋಷ್ಠಿಯಲ್ಲಿ ಡಾ.ಶಿವಶರಣ್ ಶೆಟ್ಟಿ, ಗೌರವಾಧ್ಯಕ್ಷ ಆನಂದ್ ರಾಜ್ ಶೆಟ್ಟಿ, ನವೀನ್ ಪೂಜಾರಿ, ವಿಕಾಸ್ ಶೆಟ್ಟಿ, ಅನಿಲ್ ಪಂಜಿಮೊಗರು ಉಪಸ್ಥಿತರಿದ್ದರು.
Social Plugin