Top News

ಮಂಗಳೂರು ವಿವಿ : ಕಪ್ಪೆಕೆರೆ,‌ ಮಾಂಬಾಡಿ, ಜಬ್ಬಾರ್ ಸಮೊಗೆ ಯಕ್ಷಮಂಗಳ ಪ್ರಶಸ್ತಿ ಪ್ರದಾನ ; 'ಬಲಿಪ ಮಾರ್ಗ' ಹಾಗೂ 'ಅಗರಿ ಮಾರ್ಗ' ಗ್ರಂಥಕ್ಕೆ ಕೃತಿ ಪ್ರಶಸ್ತಿಯ ಗರಿ

ಕೊಣಾಜೆ; ಯಕ್ಷಗಾನ ಹಲವು ಕಲೆಗಳಿಂದ ಪೋಷಿತಗೊಂಡು ರೂಪುಗೊಂಡ ಶ್ರೇಷ್ಠವಾದ   ಸಂಪದ್ಭರಿತ ಕಲೆಯಾದರೂ ಕಲಾವಿದರ ಬದುಕು ಮಾತ್ರ ಕಷ್ಟದಲ್ಲಿಯೇ ಇದೆ. ಬಹಳಷ್ಟು ಕಲಾವಿದರಿಗೆ ನಾನು ಮಾಸಾಶನ ಕೊಡುತ್ತಾ ಬಂದಿದ್ದೇನೆ. ಸರಕಾರ ವಿಸ್ತೃತ ಯೋಜನೆಯನ್ನು  ಕಲಾವಿದರಿಗೆ ಆರ್ಥಿಕ  ರಕ್ಷಣೆ ನೀಡಬೇಕು. ಆಗ ಕಲಾಸೇವೆಯನ್ನು ಗೌರವಿಸಿದಂತಾಗುತ್ತದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಾಯೋಜಕ  ಡಾ.ಪಿ.ದಯಾನಂದ ಪೈ ಹೇಳಿದರು.

ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ. ದಯಾನಂದ ಪೈ ಮತ್ತು ಶ್ರೀ‌ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2025-26ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಯಕ್ಷಗಾನ ರಂಗದ ಹಿರಿಯ ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತ( ಅವರ ಅನುಪಸ್ಥಿತಿಯಲ್ಲಿ ಸಹೋದರ ಮಹಾಬಲ ಹೆಗಡೆ), ಯಕ್ಷಗಾನ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಅವರಿಗೆ ಯಕ್ಷಮಂಗಳ ಪ್ರಶಸ್ತಿ ಹಾಗೂ ಕೃಷ್ಣಪ್ರಕಾಶ್ ಉಳಿತ್ತಾಯ ಅವರಿಗೆ ಕೃತಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದರು.

ಯಕ್ಷಗಾನ ನಮ್ಮ ನಾಡಿನ ವೈಶಿಷ್ಟ್ಯಪೂರ್ಣವಾದ ಕಲೆಯಾಗಿದೆ. ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಗಾನ ಅಧ್ಯಯನಕ್ಕೆ ಪೂರಕವಾಗಿ ಉತ್ತಮ‌ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಂತಸ ತಂದಿದೆ  ಎಂದರು.

 ಅಧ್ಯಕ್ಷತೆ ವಹಿಸಿದ ವಿವಿಯ ಕುಲಪತಿ ಪ್ರೊ. ಪಿ. ಎಲ್. ಧರ್ಮ ಅವರು ಮಾತನಾಡಿ ಹಿಂದಿನ ಮಂಗಳೂರು ಸರಕಾರಿ ಕಾಲೇಜು ವಿಶ್ವವಿದ್ಯಾಲಯ ಕಾಲೇಜು ಆಗಿ ರೂಪು ಗೊಂಡ ಬಳಿಕ ಕಳೆದ ಕೆಲವು ವರ್ಷಗಳಿಂದ ಆಗುತ್ತಿರುವ ಪ್ರಮಾದಕ್ಕೆ ಕ್ಷಮೆ ಕೇಳುತ್ತಾ ಅದಕ್ಕೆ ಮತ್ತೆ ಗತ ವೈಭವ ಸಾರುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಹಾಗೆಯೇ ಮಂಗಳೂರು ವಿವಿಯು ಯಕ್ಷಗಾನದಲ್ಲಿ ಭರತನಾಟ್ಯ ಶೈಲಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ವಿಶೇಷ ಪರೀಕ್ಷೆಯನ್ನು ನಡೆಸಿ ಯಕ್ಷಗಾನಕ್ಕೆ ಒಂದು ಶೈಕ್ಷಣಿಕ ಆಯಾಮವನ್ನು ನೀಡಲು ಚಿಂತನೆಗಳು ನಡೆದಿವೆ ಎಂದರು. 

ಹಾವೇರಿ ವಿವಿ ವಿಶ್ರಾಂತ ಕುಲಪತಿ  ಪ್ರೊ. ಕೆ. ಚಿನ್ನಪ್ಪ ಗೌಡ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಭಾಷಣ ಮಾಡಿದರು. 
ಸಮಾರಂಭದಲ್ಲಿ ಡಾ. ಪಿ. ದಯಾನಂದ ಪೈ ಪತ್ನಿ ಮೋಹಿನಿ ದಯಾನಂದ ಪೈ, ಮಂಗಳೂರು ವಿವಿ ಕುಲಸಚಿವ ಪ್ರೊ. ಗಣೇಶ್ ಸಂಜೀವ್ ಹಾಗೂ ಪರೀಕ್ಷಾoಗ ಕುಲಸಚಿವ ದೇವೇಂದ್ರಪ್ಪ ಉಪಸ್ಥಿತರಿದ್ದರು.
ಡಾ. ಶಶಿರೇಖಾ , ಯಕ್ಷಗುರು ದೀವಿತ್ ಕೋಟ್ಯಾನ್ ಡಾ. ಶ್ರೀ ದೇವಿ ಕಲ್ಲಡ್ಕ ಅವರು  ಸನ್ಮಾನ ಪತ್ರ ವಾಚಿಸಿದರು.

 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಹಾಗೂ ಕೃಷ್ಣ ಪ್ರಕಾಶ್ ಉಳಿತ್ತಾಯ ಅವರು ಅನಿಸಿಕೆ‌ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು.  ಯಕ್ಷಗಾನ ಅಧ್ಯಯನ  ಕೇಂದ್ರದ ಸಂಶೋಧನಾಧಿಕಾರಿ ಡಾ. ಸತೀಶ್ ಕೊಣಾಜೆ ವಂದಿಸಿದರು. 
ಕಲಾವಿದೆ ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು.  
 
ವಿಶೇಷವೆಂದರೆ ಕಾರ್ಯಕ್ರಮ ನಿರೂಪಣೆ, ಸನ್ಮಾನ, ಗಾನ ಅಭಿನಂದನೆ ಎಲ್ಲವೂ ಯಕ್ಷಗಾನ ಶೈಲಿಯಲ್ಲಿ ನಿರೂಪಣೆಗೊಂಡಿದ್ದು ಸೇರಿದ ಕಲಾಸಕ್ತರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.


ಡಾ. ಪಿ. ದಯಾನಂದ ಪೈಗಳಿಂದ ಒಂದು ಕೋಟಿ ರೂ. ಅನುದಾನ ಹಸ್ತಾಂತರ 
ಮಂಗಳೂರು‌ ವಿಶ್ವವಿದ್ಯಾನಿಲಯದ  ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಸಂಬಂಧಿ ಅಧ್ಯಯನ ಸಂಶೋಧನೆಯನ್ನು ವಿಸ್ತರಿಸುವ ಉದ್ದೇಶಕ್ಕಾಗಿ ಬೆಂಗಳೂರಿನ ಡಾ. ಪಿ. ದಯಾನಂದ ಪೈಗಳು ಒಂದು ಕೋಟಿ ರೂ. ಗಳ ವಿಶೇಷ ಅನುದಾನವನ್ನು ಡಿ.ಡಿ. ಮೂಲಕ ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರಿಗೆ ಹಸ್ತಾಂತರಿಸಿದರು. ಹಾಗೆಯೇ ಯಕ್ಷಗಾನ ಕಲಾಕೇಂದ್ರದ ಕಟ್ಟಡದ ಪ್ರತಿಧ್ವನಿ ನಿವಾರಿಸಿ ಮರುವಿನ್ಯಾಸದ ಖರ್ಚು ಭರಿಸುವ ಭರವಸೆ ನೀಡಿದರು.

Post a Comment

Previous Post Next Post