ಮಣೇಲಿನಲ್ಲಿ ಅಬ್ಬಕ್ಕ ರಾಣಿಯ ಉತ್ಸವ ಗ್ರಾಮೋತ್ಸವದ ರೂಪದಲ್ಲಿ ಆರಂಭಗೊಳ್ಳಬೇಕು, ಸಹಬಾಳ್ವೆ, ಕೋಮು ಸಾಮರಸ್ಯ, ಬಹುತ್ವದ ಹಾಗೂ ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ಜತೆಗೆ ಅಬ್ಬಕ್ಕ ರಾಣಿಯ ಐತಿಹ್ಯದ ದಿನಗಳನ್ನು ಸ್ಮರಿಸಿಕೊಳ್ಳುವಂತಹ 'ಅಬ್ಬಕ್ಕ' ಸಾಂಸ್ಕೃತಿಕ ಗ್ರಾಮವನ್ನು ಕಟ್ಟುವ ಕಾರ್ಯ ನಡೆಯಬೇಕು ಎಂದು ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಳಲಿಯ ದ.ಕ.ಜಿ.ಪ. ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ರಾಣಿ ಅಬ್ಬಕ್ಕ ಚಾವಡಿ(ಮಣೇಲ್) ಸಂಯುಕ್ತ ಆಶ್ರಯದಲ್ಲಿ ಭಾನುವಾರ ದ.ಕ.ಜಿ.ಪಂ.ಶಾಲೆಯಲ್ಲಿ ಆಯೋಜಿಸಲಾದ `ಮಣೇಲ್ದ ಪೆರ್ಮೆ ರಾಣಿ ಅಬ್ಬಕ್ಕ' ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ರಾಣಿ ಅಬ್ಬಕ್ಕ ಕುರಿತು ಚಾರಿತ್ರ್ಯಿಕ ಸಾಧನೆಗಳ ಬಗ್ಗೆ ಇನ್ನೂ ದೊಡ್ಡ ಮಟ್ಟದಲ್ಲಿ ಅಧ್ಯಯನ ನಡೆದಿಲ್ಲ. 25 ವರ್ಷಗಳಿಂದ ಆಕೆಯ ಬಗ್ಗೆ ಅಧ್ಯಯನಗಳು, ಉಳ್ಳಾಲದಲ್ಲಿ ಸ್ಮರಣೀಯ ಕಾರ್ಯಕ್ರಮ ಆರಂಭಗೊಂಡಿದೆ. ಮಣೇಲ್(ಮಳಲಿ) ಅಬ್ಬಕ್ಕ ನಡೆದಾಡಿದ ಸ್ಥಳವಾಗಿದ್ದು, ಪ್ರಾಕೃತಿಕ, ಭೌತಿಕ, ಸಾಂಸ್ಕೃತಿಕ, ಐತಿಹಾಸಿಕ, ಸಂಪನ್ಮೂಲಗಳು ಇವೆ. ಮುಂದಿನ ಪೀಳಿಗೆಗೆ ಆಕೆಯ ಸಮಗ್ರ ಚರಿತ್ರೆ ಪರಿಚಯಿಸುವ ಕೆಲಸ ಇಲ್ಲಿಂದಲೇ ಆರಂಭ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, 135 ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಅಬ್ಬಕ್ಕಳ ಬಗ್ಗೆ ನಡೆದ ಗೋಷ್ಠಿ ಸ್ಮರಣೀಯವಾಗಿದ್ದು, ಉಳ್ಳಾಲದ ರಾಣಿ ಅಬ್ಬಕ್ಕಳು ಮಳಲಿಯಲ್ಲೂ ಆಕೆಗೆ ಸಂಬಂಧಿಸಿದ ಮಣ್ಣಿನ ಅರಮನೆಯ ಪಡಿಯಚ್ಚು ಮಳಲಿಯಲ್ಲಿದೆ ಎಂಬುದು ಬಹುಜನರಿಗೆ ಗೊತ್ತಿಲ್ಲ. ಶಾಲೆಯ ಭಿತ್ತಿಯಲ್ಲಿ ಅಬ್ಬಕ್ಕಳ ಚಿತ್ರ ಮೂಡಿಸುವ ಕಾರ್ಯ ಅಕಾಡೆಮಿ ಸಹಕಾರದೊಂದಿಗೆ ನಡೆಯಲಿದೆ. ಆಕೆಯ ಚರಿತ್ರೆ ಮಣೇಲಿಗರಿಗೆ ಮುಟ್ಟಿಸುವ ಕಾರ್ಯವೂ ಆಗಬೇಕಿದೆ ಎಂದರು.
ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಅವರು `ಅಬ್ಬಕ್ಕ : ಚಾರಿತ್ರಿಕ ಅವಲೋಕನ' ವಿಷಯದಲ್ಲಿ ಉಪನ್ಯಾಸ ನೀಡಿದರು. ಇತಿಹಾಸ ತಜ್ಞ-ನಿವೃತ್ತ ಉಪನ್ಯಾಸಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಅವರು `ಮಣೇಲ್ದ ಅಬ್ಬಕ್ಕನ್ ಭೇಟಿ ಮಲ್ತಿನ ಪ್ರವಾಸಿ' ವಿಷಯ ಕುರಿತು ಮಾತನಾಡಿದರು.
ಗಂಜಿಮಠ ಗ್ರಾಪಂ ಉಪಾಧ್ಯಕ್ಷರಾದ ಸಾರಮ್ಮ, ಪಂಚಾಯತ್ ಸದಸ್ಯ ನೋಣಯ್ಯ ಕೋಟ್ಯಾನ್, ಶಾಲಾ ಮುಖ್ಯ ಶಿಕ್ಷಕ ಡಾ.ಮಹೇಶ್, ಚಿತ್ರ ಕಲಾವಿದ ಗಣೇಶ್ ಸೋಮಯಾಜಿ, ಪ್ರಶಾಂತ್ ಕುಮಾರ್ ಕಟ್ಟೆಮಾರ್, ಗುಣಪಾಲ ಮೇಂಡ, ಎಸ್ಡಿಎಂಸಿ ಅಧ್ಯಕ್ಷ ಸೀತಾರಾಮ ಪೂಜಾರಿ, ಉಳಿಪಾಡಿಗುತ್ತು ಉದಯ ಕುಮಾರ್ ಆಳ್ವ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಅಕ್ಷಯ ಆರ್. ಶೆಟ್ಟಿ, ಬಾಬು ಪಾಂಗಾಳ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ-ಶಿಕ್ಷಕಿಯರು, ಸಂಘ-ಸoಸ್ಥೆಗಳ ಪ್ರಮುಖರು, ಊರಿನ ಗಣ್ಯರು, ವಿದ್ಯಾರ್ಥಿಗಳು, ರಾಣಿ ಅಬ್ಬಕ್ಕ ಮಹಿಳಾ ಸಂಘದ ಸದಸ್ಯರು, ಗ್ರಾಮದ ಪ್ರಮುಖರು ಸಹಕರಿಸಿದರು. ರಾಣಿ ಅಬ್ಬಕ್ಕನ ಅರಮನೆಯಿಂದ ಸರ್ಕಾರಿ ಶಾಲೆಯವರೆಗೆ ಸ್ಮರಣೀಯ ಮೆರವಣಿಗೆ ನಡೆಯಿತು.
ನಿವೃತ್ತ ಪ್ರಾಂಶುಪಾಲ ಪ್ರೊ. ಅಕ್ಷಯ್ ಕುಮಾರ್ ಜೈನ್ ನಿರೂಪಿಸಿದರು. ಗುಡ್ಡೆಯಂಗಡಿಯ ಓಂ ಜನಹಿತಾಯ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮಹೇಶ್ ಶೆಟ್ಟಿ ಅವರು ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಸಂಚಾಲಕ ಬೂಬ ಪೂಜಾರಿ ವಂದಿಸಿದರು.
Post a Comment