Top News

ಡಿ.14ರಂದು ತುಳು ಅಕಾಡೆಮಿ ವತಿಯಿಂದ 'ಮಣೇಲ್‌ದ ಪೆರ್ಮೆ ರಾಣಿ ಅಬ್ಬಕ್ಕ' ವಿಚಾರ ಕೂಟ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿಯ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ರಾಣಿ ಅಬ್ಬಕ್ಕನ ಕುರಿತಾಗಿ 'ಮಣೇಲ್ ದ ಪೆರ್ಮೆ ರಾಣಿ ಅಬ್ಬಕ್ಕ' ಎಂಬ ವಿಚಾರ ಕೂಟವನ್ನು ಸ್ಥಳೀಯ ರಾಣಿ ಅಬ್ಬಕ್ಕ ಚಾವಡಿಯ ಸಹಭಾಗಿತ್ವದಲ್ಲಿ ಡಿ.14ರಂದು ಬೆಳಿಗ್ಗೆ 10.00 ಗಂಟೆಗೆ ಆಯೋಜಿಸಲಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ರಾಣಿ ಅಬ್ಬಕ್ಕನ ಅರಮನೆ ಇದ್ದಂತಹ ಮಣೇಲ್ ಗ್ರಾಮದಲ್ಲಿ ವಿದೇಶಿ ಪ್ರವಾಸಿ ಪಿಯಾತ್ರೋ ದಲ್ಲಾವೆಲ್ಲೆ ಅಬ್ಬಕ್ಕ ರಾಣಿಯನ್ನು ಭೇಟಿ ಮಾಡಿರುವ ಬಗ್ಗೆ ಆತನ ಪ್ರವಾಸ ಕಥನದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಈ ಗ್ರಾಮದಲ್ಲಿ ಅಬ್ಬಕ್ಕ ಆರಾಧನೆ ಮಾಡುತ್ತಿದ್ದ ಶ್ರೀ ಅನಂತನಾಥ ಸ್ವಾಮಿ ಬಸದಿ ಇದ್ದು, ಪ್ರಸ್ತುತ ಪ್ರತಿನಿತ್ಯ ಇಲ್ಲಿ ಪೂಜೆ ನಡೆಯುತ್ತಿದೆ ಎಂದರು.

ಸಾಂಸ್ಕೃತಿಕ ನಡಿಗೆ:
ವಿಚಾರಗೋಷ್ಠಿ ಉದ್ಘಾಟನಾ ಕಾರ್ಯಕ್ರಮದ ಮೊದಲು ಬೆಳಗ್ಗೆ 9.30 ಕ್ಕೆ ಶ್ರೀ ಅನಂತ ಸ್ವಾಮಿ ಬಸದಿಯಿಂದ ವಿಚಾರಗೋಷ್ಠಿ ನಡೆಯುವ ಮಳಲಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದವರೆಗೆ ಸಾಂಸ್ಕೃತಿಕ ನಡಿಗೆ ನಡೆಯಲಿದೆ.
ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡ ಉದ್ಘಾಟಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಚಾರಗೋಷ್ಠಿ :
ಅಬ್ಬಕ್ಕನ ಕುರಿತಾಗಿ ನಡೆಯುವ ಪ್ರಥಮ ಗೋಷ್ಠಿಯಲ್ಲಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ 'ಅಬ್ಬಕ್ಕ ಚಾರಿತ್ರಿಕ ಅವಲೋಕನ' ವಿಷಯದ ಬಗ್ಗೆ ಹಾಗೂ ಎರಡನೇ ಗೋಷ್ಠಿಯಲ್ಲಿ ಇತಿಹಾಸ ತಜ್ಞರು ಹಾಗೂ ನಿವೃತ್ತ ಉಪನ್ಯಾಸಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ 'ಮಣೇಲಿನಲ್ಲಿ ಪ್ರವಾಸಿ ಕಂಡ ಅಬ್ಬಕ್ಕ' ವಿಷಯದ ಬಗ್ಗೆ ಉಪನ್ಯಾಸ ನೀಡುವರು.

ಈ ವಿಚಾರಗೋಷ್ಠಿಯಲ್ಲಿ ಮಂಡಿಸಲ್ಪಡುವ ಚಾರಿತ್ರಿಕ ವಿಷಯಗಳ ಆಶಯದಂತೆ ಮುಂದಿನ ದಿನಗಳಲ್ಲಿ ಅಬ್ಬಕ್ಕರಾಣಿಯ ಚಿತ್ರವನ್ನು ಸ್ಥಳೀಯ ಶಾಲೆಯ ಹಾಗೂ ಕಟ್ಟೆಮಾರು ಮನೆಯ ಅವರಣಗೋಡೆಯಲ್ಲಿ ಜಿಲ್ಲೆಯ ಹಿರಿಯ ಕಲಾವಿದರು ಚಿತ್ರಿಸುವ ಯೋಜನೆಯನ್ನು ಹೊಂದಲಾಗಿದೆ.

ಕಾರ್ಯಕ್ರಮದಲ್ಲಿ ಹಿರಿಯ ಚಿತ್ರ ಕಲಾವಿದ ಗಣೇಶ್ ಸೋಮಯಾಜಿ, ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಎಮ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಶಿಧರ್ ಜಿ ಎಸ್, ಮಂಗಳೂರು ದಕ್ಷಿಣದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಈಶ್ವರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗಂಜಿಮಠ ಗ್ರಾಮ ಪಂಚಾಯತ್‌‌ನ ನಿಕಟ ಪೂರ್ವ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಪ್ರಶಾಂತ್ ಕಟ್ಟೆಮಾರ್, ಮಳಲಿ ಪ್ರಾಥಮಿಕ ಶಾಲಾ ಅಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಗುಣಪಾಲ ಮೇಂಡ, ಪ್ರೌಢಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸೀತಾರಾಮ ಪೂಜಾರಿ, ಉಳಿಪಾಡಿ ಗುತ್ತು ಸುಭಾಷ್ ಚಂದ್ರ ನಾಯ್ಕ, ಉದಯ ಅಳ್ವ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಭಾಗವಹಿಸುವರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ,  ಸದಸ್ಯರಾದ ಬೂಬ ಪೂಜಾರಿ ಮಳಲಿ, ಅಕ್ಷಯ ಆರ್. ಶೆಟ್ಟಿ, ವಿಶ್ರಾಂತ ಪ್ರಾಂಶುಪಾಲ ಹಾಗೂ ಮಣೇಲ್ ಗ್ರಾಮಸ್ಥರು ಆಗಿರುವ ಪ್ರೊ.ಅಕ್ಷಯ ಕುಮಾರ್ ಮಳಲಿ, ಪುರಂದರ ಕುಲಾಲ್ ಉಪಸ್ಥಿತರಿದ್ದರು.

Post a Comment

Previous Post Next Post