ಮಂಗಳೂರು: ಬಿಲ್ಲವ ಸಂಘ (ರಿ.) ಉರ್ವ–ಅಶೋಕನಗರದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಯಾಮಿನಿ ಬಿಲ್ಡರ್ಸ್ & ಡೆವಲಪರ್ಸ್ನ ಮಾಲಕರಾದ ದಾಮೋದರ ದಂಡಕೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ನಾರಾಯಣಗುರುವರ್ಯರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಹಿರಿಯ ಸಾಹಿತಿಯಾಗಿರುವ ಡಾ. ಮೀನಾಕ್ಷಿ ರಾಮಚಂದ್ರ ಅವರು ಉಪನ್ಯಾಸ ನೀಡಿ, “ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿಯ ಮೂಲಕ ಶೂದ್ರ ವರ್ಗ ಮತ್ತು ಕೆಳ ವರ್ಗದವರಿಗೆ ಸ್ವಾಭಿಮಾನ ತುಂಬಿದವರು ನಾರಾಯಣಗುರುಗಳು. ವಿದ್ಯೆ ಮತ್ತು ಉದ್ಯೋಗಕ್ಕೆ ವಿಶೇಷ ಮಹತ್ವ ನೀಡಿದವರು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್, ಯೇನಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ. ಯೇನಪೋಯ ಅಬ್ದುಲ್ಲ ಕುಂಜಿ, ಭಾರತ್ ಕೋ–ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಉದ್ಯಮಿ ಪ್ರಶಾಂತ್ ಸನಿಲ್, ಕಿರಣ್ ಪೈ, ಬಿಲ್ಲವ ಸಂಘದ ಗೌರವಾಧ್ಯಕ್ಷ ಡಾ. ಬಿ. ಜಿ. ಸುವರ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮತ್ತು SSLC, PUC ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಪ್ರದಾನ ನಡೆಯಿತು.
ಕಾರ್ಯದರ್ಶಿ ಚೇತನ್ ಕುಮಾರ್ ಸ್ವಾಗತಿಸಿದರು. ನಿತ್ಯಾ ಹರೀಶ್ ಪ್ರಾಸ್ತಾವನೆ ಸಲ್ಲಿಸಿದರು. ಗೋಪಾಲ್ ಕೋಟ್ಯಾನ್ ಮತ್ತು ಶ್ರೀನಿವಾಸ್ ಬಿ. ನಿರೂಪಿಸಿದರು. ಜಯರಾಮ ಕಾರಂದೂರು ವಂದಿಸಿದರು