ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಪೂರ್ವದ ಅಗ್ರಪಂಥಿಯ ಮಹಿಳಾ ಲೇಖಕಿಯರಲ್ಲಿ ಓರ್ವರು, ಸ್ವಾತಂತ್ರ್ಯ ಚಳವಳಿಯಲ್ಲೂ ಭಾಗವಹಿಸಿದ್ದ ಹಿರಿಯ ಲೇಖಕಿ ಲಲಿತಾ ರೈ (98) ಅ.11(ಶನಿವಾರ)ರಂದು ಮಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಲಲಿತಾ ರೈ ಅವರು ಮಂಗಳೂರಿನ ಬೆಸೆಂಟ್ ಪ್ರೌಢಶಾಲೆಯ ಮೆಟ್ರಿಕ್ ತರಗತಿಯ ಮೊದಲ ಬ್ಯಾಚ್ ವಿದ್ಯಾರ್ಥಿನಿಯಾಗಿದ್ದು, ನಂತರ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದರು. ಸೈಂಟ್ ಆನ್ಸ್ ಬಿ.ಎಡ್ ಕಾಲೇಜಿನಲ್ಲಿ ಶಿಕ್ಷಕ ತರಬೇತಿ ಪಡೆದ ಅವರು ಕೆನರಾ ಪ್ರೌಢಶಾಲೆಯಲ್ಲಿ ಅಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು.
ಮಹಿಳಾ ಸಬಲೀಕರಣಕ್ಕಾಗಿ ಅನೇಕ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಲಲಿತಾ ರೈ ಅವರು ಮಂಗಳೂರು ಮಹಿಳಾ ಸಭೆ, ಭಗಿನಿ ಸಮಾಜ ಹಾಗೂ ಥಿಯೋಪಿಕಲ್ ಸೊಸೈಟಿಯಂತಹ ಸಂಸ್ಥೆಗಳ ಸ್ಥಾಪಕ ಸದಸ್ಯರಾಗಿದ್ದರು. ಕರಾವಳಿ ಲೇಖಕಿಯರ ಮತ್ತು ವಾಚಕೀಯರ ಸಂಘದ ಸಕ್ರೀಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.
ಸಾಹಿತ್ಯ ಕ್ಷೇತ್ರದಲ್ಲಿಯೂ ಪ್ರಭಾವ ಬೀರಿದ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಪತ್ರಿಕೆಗಳಲ್ಲಿ ಕಥೆ ಹಾಗೂ ಲೇಖನಗಳನ್ನು ಬರೆದಿದ್ದರು. ಅವರ ಪ್ರಮುಖ ಕೃತಿಗಳಲ್ಲಿ ‘ಚಿತ್ತಗಾಂಗ್ನ ಕ್ರಾಂತಿವೀರರು’ (ಅನುವಾದಿತ ಕೃತಿ), ‘ಮತ್ತೆ ಬೆಳಗಿತು ಸೊಡರು’, ‘ಇಂಟರ್ನೆಟ್ನೊಳಗೆ ಮತ್ತು ಇತರ ಕತೆಗಳು’, ‘ಗೃಹಣ ಕಳೆಯಿತು’, ‘ದೇಸಾಂತರ’, ಹಾಗೂ ತುಳು ಕಾದಂಬರಿಯಾದ ‘ಬೊಂಟೆ ದೇರ್ಂಡ್’ ಒಳಗೊಂಡಿವೆ.
ಅವರು ಎಸ್.ಯು. ಪಣಿಯಾಡಿ ಪ್ರಶಸ್ತಿ, ರಾಣಿ ಅಬ್ಬಕ್ಕ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದರು.
ಅಂತಿಮ ಸಂಸ್ಕಾರ:
ಅವರ ಅಂತಿಮ ವಿಧಿವಿಧಾನಗಳು ಬುಧವಾರ(ಅ.15) ಬೆಳಿಗ್ಗೆ 10 ಗಂಟೆಗೆ ಕೊಡಿಯಲ್ಬೈಲು ಗುತ್ತು ಪಶ್ಚಿಮ ರಸ್ತೆಯಲ್ಲಿರುವ ಅವರ ಸ್ವಗೃಹ ‘ಲಲಿತಾ ರೆಸಿಡೆನ್ಸಿ ವಿಶ್ವಾಸ’ ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಂತಾಪ:
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಲಲಿತಾ ರೈ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Post a Comment