ಮಂಗಳೂರು: ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರದ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಸುಮಾರು 60ಕ್ಕೂ ಹೆಚ್ಚು ನಿವೃತ್ತ ವೀರ ಯೋಧರು ಹಾಗೂ ವೀರನಾರಿಯರನ್ನು ಗೌರವಿಸುವ ವಿಶೇಷ ಸಮಾರಂಭ ಭಾನುವಾರ ಕದ್ರಿ ಬಂಜನ್ ಚಾವಡಿಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ಹಿಲ್ ಸೈಡ್ ಆರ್ಕಿಟೆಕ್ಟ್ನ ಎಂಡಿ ರಾಧಾಕೃಷ್ಣ ಬಂಜನ್, ದೇಶದ ಭದ್ರತೆಗೆ ಪಾಕಿಸ್ತಾನ, ಚೀನಾ ಸೇರಿದಂತೆ ಬಾಹ್ಯ ಶಕ್ತಿಗಳ ಜತೆಗೆ ದೇಶದೊಳಗಿನ ದೇಶದ್ರೋಹಿಗಳೂ ಸವಾಲಾಗಿದ್ದಾರೆ. ಇಂತಹ ಸವಾಲುಗಳನ್ನು ನಿಯಂತ್ರಿಸುವುದು ಕಷ್ಟದ ಕಾರ್ಯವಾಗಿದೆ. ಸೈನಿಕರ ನಿಸ್ವಾರ್ಥ ಸೇವೆಯಿಂದಾಗಿ ದೇಶದ ಜನರು ಸುರಕ್ಷಿತವಾಗಿ ಬದುಕಲು ಸಾಧ್ಯವಾಗಿದೆ ಎಂದರು.
ದೇಶದ ಆಂತರಿಕ ಅಭದ್ರತೆ ನಿವಾರಣೆಯಾದಾಗ ಮಾತ್ರ ಭಾರತ ಇನ್ನಷ್ಟು ಪ್ರಗತಿಪರ ರಾಷ್ಟ್ರವಾಗಲು ಸಾಧ್ಯ. ಮಕ್ಕಳಿಗೆ ಪೋಷಕರೇ ಮೊದಲ ಗುರುಗಳಾಗಿದ್ದು, ಅವರು ಹೆತ್ತವರನ್ನು ನೋಡಿ ಕಲಿಯುತ್ತಾರೆ. ಪೋಷಕರು ಮಕ್ಕಳಿಗೆ ಬೇರೆ ಏನನ್ನೂ ನೀಡಲು ಸಾಧ್ಯವಾಗದಿದ್ದರೂ ಉತ್ತಮ ಶಿಕ್ಷಣ ನೀಡಬೇಕು. ವಿಕಸಿತ ಭಾರತದ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಪಾತ್ರ ವಹಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬಿಎಸ್ಎಫ್ ನಿವೃತ್ತ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಅಧ್ಯಕ್ಷ ಸುಂದರ್ ಕುಲಾಲ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್, ಬಿಎಸ್ಎನ್ಎಲ್ ನಿವೃತ್ತ ಡಿಜಿಎಂ ಐತಪ್ಪ ಮೂಲ್ಯ, ಪ್ರಧಾನ ಸಂಘಟಕ ಹಾಗೂ ಎನ್ಸಿಸಿ ಆಫೀಸರ್, ನೇವಲ್ ವಿಂಗ್ ಲೆಫ್ಟಿನೆಂಟ್ ಕಮಾಂಡರ್ ಡಾ. ಯತೀಶ್ ಕುಮಾರ್, ಸಹ ಸಂಘಟಕರಾದ ನಿವೃತ್ತ ನಾಯಬ್ ಸುಬೇದಾರ್ ಮೋಹನ್ ಕಡಂಬಾರ್, ನಿವೃತ್ತ ನಾಯಬ್ ಗೋಪಾಲ್ ಎನ್. ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ವೆಂಕಪ್ಪ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
Post a Comment