ಬಜಪೆ: ಪೇರಾರ ನಿವಾಸಿ ನಾಗೇಶ್ ಅವರ ಮನೆಯ ಆವರಣದಲ್ಲಿ ಬೃಹತ್ ಗಾತ್ರದ ನಾಗರ ಹಾವು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಆದರೆ, ಸ್ಥಳಕ್ಕೆ ಧಾವಿಸಿದ ಖ್ಯಾತ ಉರಗ ತಜ್ಞ ಸ್ನೇಕ್ ಮಾಸ್ಟರ್ ಇಸ್ಮಾಯಿಲ್ ಅಡೂರು ಅವರು ಹಾವನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಯ ಆವರಣದಲ್ಲಿ ದೈತ್ಯ ನಾಗರ ಹಾವು ಕಾಣಿಸಿಕೊಳ್ಳುತ್ತಿದ್ದಂತೆ ಮನೆಯವರು ಮತ್ತು ಸ್ಥಳೀಯರು ತಕ್ಷಣವೇ ಇಸ್ಮಾಯಿಲ್ ಅವರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಅವರು, ಸ್ಥಳಕ್ಕೆ ಆಗಮಿಸಿ ಅತ್ಯಂತ ಜಾಣ್ಮೆಯಿಂದ ಹಾವನ್ನು ಯಾವುದೇ ಗಾಯಗಳಾಗದಂತೆ ಹಿಡಿದಿದ್ದಾರೆ.
ಸ್ನೇಕ್ ಮಾಸ್ಟರ್ ಇಸ್ಮಾಯಿಲ್ ಅವರು "ನಾಗರ ಹಾವಿನ ದೋಷ ಎನ್ನುವುದು ಹಿಂದೂ, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಎಂಬ ಭೇದವಿಲ್ಲದೆ ಎಲ್ಲರಿಗೂ ಇರುತ್ತದೆ. ಪ್ರಕೃತಿಯ ಈ ಜೀವಿಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದು ನನ್ನ ಸೇವಾವಧಿಯಲ್ಲಿ ನಾನು ರಕ್ಷಿಸಿದ 426ನೇ ನಾಗರ ಹಾವು ಆಗಿದೆ. ಇದನ್ನು ಸುರಕ್ಷಿತವಾಗಿ ಜನವಸತಿ ಇಲ್ಲದ ದೂರದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡಲಾಗುವುದು" ಎಂದು ತಿಳಿಸಿದರು.
ಇಸ್ಮಾಯಿಲ್ ಅವರು ಹಾವನ್ನು ಹಿಡಿದು ಪ್ರದರ್ಶಿಸುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಅವರ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಹಾವು ಮುಕ್ತವಾಗಿ ಕಾಡಿಗೆ ಸೇರುತ್ತಿರುವುದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
Tags
ಮಂಗಳೂರು