ಕಾರ್ಕಳ | ನಲ್ಲೂರು : ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ; ಮದ್ಯ ವ್ಯಸನದಿಂದ ಮನನೊಂದಿರುವ ಶಂಕೆ

ಕಾರ್ಕಳ : ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಕೇರ ಲಂಗಾಜೆ ಮನೆ ಸಮೀಪ 75 ವರ್ಷದ ವೃದ್ಧರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಬಾಬು ಗೌಡ (75) ಎಂದು ಗುರುತಿಸಲಾಗಿದೆ. ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಮಕ್ಕಳು ಅವರ ಊಟೋಪಚಾರದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು.

ಜುಲೈ 29ರಂದು ಸಂಜೆ ಪುತ್ರಿ ಶೋಭಾ ತಂದೆಗೆ ಊಟ ನೀಡಿ ತೆರಳಿದ್ದರು. ಆದರೆ ಮರುದಿನ ಬೆಳಿಗ್ಗೆ ತಿಂಡಿ ನೀಡಲು ಹೋದಾಗ ಅವರು ಮನೆಯಲ್ಲಿ ಕಾಣಿಸದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು.

ಜುಲೈ 31ರಂದು ಬೆಳಿಗ್ಗೆ ಮನೆಯ ಸಮೀಪದ ಸರ್ಕಾರಿ ಬಾವಿಯ ಬಳಿ ಬಾಬು ಗೌಡ ಅವರ ಚಪ್ಪಲಿ ಪತ್ತೆಯಾಗಿದ್ದು, ಬಳಿಕ ಬಾವಿಯನ್ನು ಪರಿಶೀಲಿಸಿದಾಗ ಅವರ ಮೃತದೇಹ ಪತ್ತೆಯಾಯಿತು.

ಕುಟುಂಬದವರ ಮಾಹಿತಿ ಪ್ರಕಾರ, ಬಾಬು ಗೌಡ ಅವರಿಗೆ ಮದ್ಯಪಾನದ ತೀವ್ರ ಚಟವಿದ್ದು, ಅದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪುತ್ರರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Post a Comment

Previous Post Next Post