ತುಳು ನಾಟಕ ಕಾರ್ಯಗಾರಕ್ಕೆ ಚಾಲನೆ | ವಿದ್ಯಾರ್ಥಿಗಳ ಸೃಜನಶೀಲತೆಗೆ ರಂಗಭೂಮಿ ಪೂರಕ : ಲಕ್ಷ್ಮಣ ಕುಮಾರ್ ಮಲ್ಲೂರು

ಮಂಗಳೂರು : ಕಾಲೇಜು ವಿದ್ಯಾರ್ಥಿಗಳಿಗೆ  ರಂಗಭೂಮಿಯ ಪರಿಚಯ ಮಾಡುವುದು  ಹಾಗೂ ನಾಟಕಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ
ಸೃಜನಶೀಲತೆ ಬೆಳೆಯಲು ಸಾಧ್ಯವಾಗುವುದು  ಎಂದು ಹಿರಿಯ ರಂಗಭೂಮಿ ಹಾಗೂ ಸಿನಿಮಾ ನಟ ಲಕ್ಷ್ಮಣ ಕುಮಾರ್ ಮಲ್ಲೂರು ಅವರು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರಿನ ಅಶೋಕನಗರದ ಎಸ್ .ಸಿ. ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಹತ್ತು ದಿನಗಳ   ತುಳು ನಾಟಕ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ತುಳು ಅಕಾಡೆಮಿಯ ಸದಸ್ಯ ಹಾಗೂ ರಂಗ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಅವರು ಮಾತನಾಡಿ, ರಂಗಭೂಮಿಯ ಚಟುವಟಿಕೆಗಳು ವಿದ್ಯಾರ್ಥಿಗಳ ಕಲಿಕೆಗೂ ಸ್ಫೂರ್ತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳು ಭಾಷೆಯ ಬೆಳವಣಿಗೆಗೆ ತುಳು ನಾಟಕಗಳ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.  

ಕಾಲೇಜಿನ ಪ್ರಾಂಶುಪಾಲ ಹಾರ್ದಿಕ್ ಚೌಹಾಣ್ ಅವರು ಮಾತನಾಡಿ, ಸ್ಥಳೀಯ ಭಾಷೆ, ಕಲಾ ಪ್ರಕಾರಗಳಿಗೆ  ಎಸ್.ಸಿ.ಎಸ್ .ಕಾಲೇಜು ನಿರಂತರವಾಗಿ ಬೆಂಬಲ ನೀಡುವುದಾಗಿ ತಿಳಿಸಿದರು. 
ನಾಟಕ ಕಾರ್ಯಗಾರದ ನಿರ್ದೇಶಕ ಯೋಗೀಶ್ ಶೆಟ್ಟಿ, ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಉಪಸಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಸುಪ್ರೀತಾ ಶೆಟ್ಟಿ ಸ್ವಾಗತಿಸಿದರು, ತುಳು ಸಂಘದ ಸಂಯೋಜಕಿ  ದೀಕ್ಷಿತಾ ವಂದಿಸಿದರು, ವಿದ್ಯಾರ್ಥಿ ರಿತೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Post a Comment

Previous Post Next Post