ಫರಂಗಿಪೇಟೆ ಅರ್ಕುಳ ದ್ವಾರದ ಬಳಿ ಸ್ಕೂಟರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ; ಸವಾರನಿಗೆ ಗಂಭೀರ ಗಾಯ

ಫರಂಗಿಪೇಟೆ: ರಾಷ್ಟ್ರೀಯ ಹೆದ್ದಾರಿಯ ಅರ್ಕುಳ ದ್ವಾರದ ಸಮೀಪ ಶುಕ್ರವಾರ ಮಧ್ಯಾಹ್ನ ಲಾರಿ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಲಭ್ಯವಾದ ಮಾಹಿತಿಯ ಪ್ರಕಾರ, ಸ್ಕೂಟರ್ ಸವಾರ ಅರ್ಕುಳ ದ್ವಾರದ ಬಳಿ ಬಲಭಾಗಕ್ಕೆ ತಿರುಗಲು ಯತ್ನಿಸುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಸರಕು ಸಾಗಾಟದ ಲಾರಿ ಸ್ಕೂಟರ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸ್ಕೂಟರ್ ಲಾರಿಯ ಚಕ್ರದಡಿಗೆ ಸಿಲುಕಿದ್ದು, ಚಾಲಕನಿಗೆ ತೀವ್ರ ಗಾಯಗಳಾಗಿವೆ.

ಘಟನೆಯ ತೀವ್ರತೆ ನಡುವೆ, ಸ್ಕೂಟರ್‌ನ ಹಿಂಬದಿ ಸವಾರ ಸಮಯೋಚಿತವಾಗಿ ಜಿಗಿದು ಅಪಾಯದಿಂದ ಪಾರಾಗಿರುವುದು ಗಮನಾರ್ಹವಾಗಿದೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ಗಾಯಾಳುವಿನ ನೆರವಿಗೆ ಧಾವಿಸಿದರು. ಈ ವೇಳೆ ಸ್ಥಳೀಯ ರಿಕ್ಷಾ ಚಾಲಕರೊಬ್ಬರು ಮಾನವೀಯತೆ ಪ್ರದರ್ಶಿಸಿ, ಯಾವುದೇ ವಿಳಂಬವಿಲ್ಲದೆ ಗಾಯಾಳುವನ್ನು ತಮ್ಮ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದರು.
Previous Post Next Post