ಮೂಡುಬಿದಿರೆ: ಗುರುಪುರದಲ್ಲಿ ಫಲ್ಗುಣಿ ನದಿಗೆ ಜಿಗಿದು ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪ್ರಿಯಕರನನ್ನು ಬಜಪೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮದುವೆ ನಿರಾಕರಿಸಿ ಆತ್ಮಹ*ತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿತ ಆರೋಪಿಯನ್ನು ಮಳಲಿ ತೆಂಕುಳಿಪಾಡಿ ಗ್ರಾಮದ ನಿವಾಸಿ ಮನೋಜ್ ಅಲಿಯಾಸ್ ಮುರಳಿ ಪೂಜಾರಿ (21) ಎಂದು ಗುರುತಿಸಲಾಗಿದ್ದು, ಆತ ಗಂಜಿಮಠದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.
ಮೂಡುಬಿದಿರೆಯ ನವ್ಯಾ ಮತ್ತು ಮನೋಜ್ ಇನ್ಸ್ಟಾಗ್ರಾಂ ಮೂಲಕ ಪರಿಚಯಗೊಂಡು ಕಳೆದ ಕೆಲಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವೇಳೆ ಮನೋಜ್ ನವ್ಯಾಳಿಗೆ ವಿವಾಹವಾಗುವುದಾಗಿ ಭರವಸೆ ನೀಡಿದ್ದನು. ಆದರೆ ಇತ್ತೀಚಿನ ದಿನಗಳಲ್ಲಿ ಆಕೆಯಿಂದ ದೂರವಾಗಲು ಯತ್ನಿಸಿ, ಮದುವೆಗೆ ನಿರಾಕರಿಸಿದ್ದನು ಎನ್ನಲಾಗಿದೆ. ಇದರಿಂದ ಮನನೊಂದ ನವ್ಯಾ ಸೋಮವಾರ ಫಲ್ಗುಣಿ ನದಿಯ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಆತ್ಮಹತ್ಯೆಗೆ ಮೊದಲು ನವ್ಯಾ ಬರೆದಿದ್ದ ಡೆತ್ನೋಟ್ ಪೊಲೀಸರಿಗೆ ಲಭ್ಯವಾಗಿದ್ದು, ಅದರಲ್ಲಿ ತನ್ನ ಸಾವಿಗೆ ಮನೋಜ್ ಕಾರಣ ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಘಟನೆಯ ವೇಳೆ ನವ್ಯಾ ಜೊತೆಗಿದ್ದ ಸ್ನೇಹಿತೆ ಕವನಾ ಎಂಬಾಕೆಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಪ್ರೇಮ ವೈಫಲ್ಯದ ವಿಷಯ ಬೆಳಕಿಗೆ ಬಂದಿದೆ. ಈ ಎಲ್ಲ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಮನೋಜ್ ವಿರುದ್ಧ ಪ್ರಕರಣ ದಾಖಲಿಸಿ ಬಂಧನ ಕ್ರಮ ಕೈಗೊಂಡಿದ್ದಾರೆ.
Post a Comment