ಆರೋಪಿಯೊಬ್ಬನ ಜಾಮೀನಿಗಾಗಿ ನಕಲಿ ದಾಖಲೆ ನೀಡಿ ನ್ಯಾಯಾಲಯಕ್ಕೆ ವಂಚನೆ ; ಅನ್ಯರ ಜಮೀನನ್ನು ತನ್ನದೆಂದು ತೋರಿಸಲು ಯತ್ನಿಸಿದ ಆರೋಪಿಯ ಬಂಧನ

ಪುತ್ತೂರು ನಿವಾಸಿಯೊಬ್ಬರ ಮಾಲಿಕತ್ವದಲ್ಲಿರುವ ಜಮೀನಿನ ಆರ್‌ಟಿಸಿಯನ್ನು ತನ್ನ ಹೆಸರಿನ ಜಮೀನು ದಾಖಲೆ ಎಂದು ನಂಬಿಸಿ, ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ದ.ಕ. ಜಿಲ್ಲೆ ಮಂಗಳೂರು ನ್ಯಾಯಾಲಯಕ್ಕೆ ಸಲ್ಲಿಸಿ ಆರೋಪಿಗೆ ಜಾಮೀನು ಪಡೆಯುವಂತೆ ಮಾಡಿ ವಂಚಿಸಿದ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಲೆಬಾಳುವ ಭದ್ರತಾ ಪತ್ರವನ್ನು ನಕಲಿಸಿ ಸಲ್ಲಿಸಿದ ಆರೋಪದಲ್ಲಿ ಪಡುವನ್ನೂರು ಗ್ರಾಮ, ಪುತ್ತೂರು ನಿವಾಸಿ ಅಬ್ದುಲ್ ಹಾಶೀಮ್ (34) ಎಂಬಾತನನ್ನು ನವೆಂಬರ್‌ 6 ರಂದು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಂತರ ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಈ ಸಂಬಂಧ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ. 84/2025, ಕಲಂ 417, 419, 467, 468, 471 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ವೇಳೆ ನಕಲಿ ದಾಖಲೆ ಸೃಷ್ಟಿಸಿ ಪಿರ್ಯಾದುದಾರರೆಂದು ಹೇಳಿಕೊಂಡು, ನಕಲಿ ಸಹಿ ಮಾಡಿ ನ್ಯಾಯಾಲಯವನ್ನು ವಂಚಿಸಲು ಯತ್ನಿಸಿದ ಆರೋಪ ದೃಢಪಟ್ಟಿದೆ.

Post a Comment

Previous Post Next Post