ದೆರಳಕಟ್ಟೆ ಬಳಿ ಓವರ್ ಟೇಕ್ ರಭಸಕ್ಕೆ ರಸ್ತೆ ಬದಿಗೆ ವಾಲಿದ ಕಾಲೇಜ್ ಬಸ್ - ಇನ್ಫೋಸಿಸ್ ಉದ್ಯೋಗಿ ಬೈಕ್ ಸವಾರ ಸಾವು !

ಮಂಗಳೂರಿನ ದೆರಳಕಟ್ಟೆ ಬಳಿ ಶನಿವಾರ ಸಂಜೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ.
ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಪಿ.ಏ.ಇಂಜಿನಿಯರಿಂಗ್ ಕಾಲೇಜಿನ ಬಸ್, ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ವಾಲಿದ್ದು, ಈ ವೇಳೆ ಬಸ್‌ನ ಅಡಿಯಲ್ಲಿ ಬೈಕ್ ಸಿಲುಕಿಕೊಂಡಿದೆ. ಬೈಕ್‌ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.

ಮೃತಪಟ್ಟವರನ್ನು ಚಿಕ್ಕಮಗಳೂರಿನ ಮೂಲದ, ಇನ್ಫೋಸಿಸ್ ಉದ್ಯೋಗಿ ಪ್ರಜ್ವಲ್ ಅರ್ನಾಲ್ಡ್ (30) ಎಂದು ಗುರುತಿಸಲಾಗಿದೆ. ಇವರು ಮುಡಿಪು-ಕಂಬಳಪದವು ನಿವಾಸಿಯಾಗಿದ್ದರು.
ಅಪಘಾತದ ತಕ್ಷಣ ಸ್ಥಳೀಯರು ಕ್ರೇನ್ ಸಹಾಯದಿಂದ ಬಸ್ ಅನ್ನು ಎತ್ತಿ, ಗಾಯಗೊಂಡಿದ್ದ ಪ್ರಜ್ವಲ್ ಮತ್ತು ಅವರ ಜೊತೆಗಿದ್ದ ಸಹೋದ್ಯೋಗಿ ಸಾಗರ ಮೂಲದ ಅಕ್ಷತಾ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಜ್ವಲ್ ಮೃತಪಟ್ಟರು. ಜೊತೆಗಿದ್ದ ಅಕ್ಷತಾ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. 

ಬಸ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Previous Post Next Post